Friday, July 30, 2010

ನನ್ನ ಖಯಾಲಿ

ಕಡೆಗೂ ನನ್ನ ಇನ್ನೊಂದು ಬ್ಲಾಗ್ ರೂಪಿಸುವ ಬಯಕೆ ಇಂದಿಗೆ ಫಲಿಸಿದೆ! ಅಲ್ಲಿ ಇಲ್ಲಿ ತಿರುಗಾಡುತ್ತ ತೆಗೆಯುವ ಛಾಯಾಚಿತ್ರಗಳ ಬ್ಲಾಗ್ ಒಂದನ್ನು ರೂಪಿಸುವ ಯೋಚನೆ ಬಹಳ ದಿನಗಳಿಂದಲೂ ಇತ್ತು. ಈಗ ಅದು ವಾಸ್ತವಕ್ಕೆ ಬಂದಿದೆ.
ನನ್ನ ಹೊಸ ಬ್ಲಾಗನ್ನೂ ಕೂಡ ಬೆನ್ನು ತಟ್ಟಿ ಪ್ರೋತ್ಸಾಹಿಸ್ತೀರಿ ಅನ್ನೋ ಆಶಾಭಾವ ನಂದು!
ಇದು ನನ್ನ ಬ್ಲಾಗ್.. ನನ್ನ ಖಯಾಲಿ !!

Tuesday, July 20, 2010

ತುಲನೆ!

ಜಿನುಗುನುಗುತಿದೆ ಆಷಾಢದ ಮಳೆಯು..
ಮೆಲ್ಲ ನಗುತಿಹುದು ಹೂ-ಪಕಳೆಯು!

ಮೇಘರಾಜ ಮರೆಮಾಚಿ ನೇಸರನ
ಆಡುತಿಹನಾಟ ಬಾನಂಗಳದಲಿ..

ವರುಣ ತಾ ಭೂರಮೆಯ ತಣಿಸುತಿಹ
ಅಮರ ಪ್ರೇಮಿಯು ತಾ ನಾಚುವೆನಿತು!

ಧರಣಿಕುಲೆ ಹೂ ಮುಡಿದು ನಲಿದಿಹಳು
ಪ್ರಿಯನ ಅಮೃತಧಾರೆಯ ಮೆಲ್ಲ ಹೀರಿಹಳು!

ಅಲ್ಪ ಮನುಜಮತಿಯ ತೋರಿಸುತ್ತ..
ಸುತ್ತುವರಿದರೂ ಸದಾ ಪ್ರಿಯೆಯ ಸುತ್ತ,
ನೀಡಬಲ್ಲನೆ ಸಖನು ಇಂತಿಪ್ಪ ಮಳೆ-ಭುವಿಯ ತೆರದಿ ಸವಿಯಾದ ಮುತ್ತ?

Friday, July 16, 2010

ಜೀವ - ಜೀವನ.

ನನಗೀಗ ೨೨ ನೇ ವರ್ಷ ನಡೀತಾ ಇದೆ. ಬುದ್ಧಿ ಬಂದಾಗಿನ್ದ್ಲೂ, ಅಂದ್ರೆ ಸುಮಾರು ೧೯ ವರ್ಷಗಳಿಂದಲೂ ನನ್ನ ಪ್ರಪಂಚ ಒಂದೇ - "ಮೈಸೂರು".
ಏನಿಲ್ಲ ಈ ಊರಲ್ಲಿ? ಖಾಲಿ ಖಾಲಿ ರಸ್ತೆಗಳು, ನಂಬಿಕಸ್ಥ ಜನಗಳು. ನೆಳಲನೀವ ಮರಗಳು, ಮುದವನೀವ ಕೆರೆಗಳು! ಧರ್ಮ ಬೆಳಗಿಪ ಗುಡಿಗಳು!

೧೦ ನಿಮಿಷದಲ್ಲಿ, ಮಾಯಾನಗರಿ ಬೆಂಗಳೂರಲ್ಲಿ ಒಂದು ರಸ್ತೇನ ಆ ಕಡೆಯಿಂದ ಈ ಕಡೆ ದಾಟೋಕೆ ಹೆಣಗಾಡಬೇಕು.. ಅದೇ ೧೦ ನಿಮಿಷ  ತಗೊಂಡು, ಒಂದು ಗಾಡಿ ಇದ್ರೆ, ಇಡೀ ಮೈಸೂರನ್ನೇ ಒಂದು ಸುತ್ತು ಹಾಕಬಹುದು. ಅದೇ ಮೈಸೂರು! ಎಲ್ಲಿಂದೆಲ್ಲಿಗೆ ಹೋದರೂ ಅಬ್ಬಬ್ಬ ಅಂದ್ರೆ ೧೫ ನಿಮಿಷ ತಗೊಂಡ್ರೆ ಹೆಚ್ಚು! ಬೇಕಾದಾಗ ಕಾರಂಜಿ ಕೆರೆ, ಬೇಡವಾದಾಗ ಕುಕ್ಕರಹಳ್ಳಿ ಕೆರೆ. ಖುಷಿ ಆದ್ರೆ ಚಾಮುಂಡಿ ಬೆಟ್ಟ - ರಸ್ತೆ ಮೇಲೆ. ಪುರುಸೋತ್ತಿದ್ರೂ ಚಾಮುಂಡಿ ಬೆಟ್ಟ - ಮೆಟ್ಟಿಲು ಹತ್ಕೊಂಡು! ಉತ್ತರಕ್ಕೆ ಅರ್ಧ ಗಂಟೆ ಶ್ರೀರಂಗಪಟ್ನ, ದಕ್ಷಿಣಕ್ಕೆ ಅರ್ಧ ಗಂಟೆ ನಂಜನಗೂಡು! ಪಶ್ಚಿಮಕ್ಕೆ ಅರ್ಧ ಗಂಟೆ ಸೋಮನಾಥಪುರ, ಪೂರ್ವಕ್ಕೆ ಅರ್ಧ ಗಂಟೆ ಮೀನಾಕ್ಷಿಪುರ! ಕೂಗಳತೆಯ ದೂರದ ರಂಗಾಯಣ, ನಟನ.. ಹ್ಮ್ಮ್ಮ್... ಇನ್ಮೇಲೆ ಇವೆಲ್ಲ ನಂಗೆ 'ಇತಿಹಾಸ' ಆಗುತ್ತೋ ಏನೋ ಅಂತ ದಿಗಿಲಾಗ್ತಿದೆ! ದಿನಾ ಬೆಟ್ಟ ಹತ್ತಿ ಇಳಿಯೋದ್ರಲ್ಲಿ ಇರೋ ಖುಷಿನೇ ಬೇರೆ. ಬಂಡೆ ಮೇಲೆ ಕೂತು ಇಡೀ ಊರನ್ನೇ ನೋಡೋ ಮಜಾ ಇನ್ನೇನು ಮುಗಿಯುತ್ತಲ್ಲ ಅನ್ನೋ ಬೇಸರ. ಜಿ.ಟಿ.ಆರ್. ಮಸಾಲೆ ದೋಸೆ, ಗ್ರೀನ್ ಲೀಫ್ ಬಿಸಿ ಬಿಸಿ ಕಾಫಿ, ಬಾಂಬೆ ಟಿಫಾನೀಸ್ - ಮಹಾಲಕ್ಷ್ಮಿ ಸ್ವೀಟ್ಸ್ ಮೈಸೂರು ಪಾಕ್! ಸಿಂಡ್ರೆಲಾ-ಅಕ್ಲು ಆಲೂ ಪರಾಟ,., ಮಹೇಶ್ ಪ್ರಸಾದ್ ಇಡ್ಲಿ ವಡೆ.. ಖಾನ ಖಜಾನ ಮಲ್ಲಿಗೆ ಇಡ್ಲಿ..ಫಲಾಮೃತ ಐಸ್ ಕ್ರೀಮ್..ಹನುಮಂತು ಚಿಕನ್ ಬಿರಿಯಾನಿ, ಆರ್.ಆರ್.ಆರ್ ಅನ್ಲಿಮಿಟೆಡ್ ಊಟ, ಚಾಟ್ ಸ್ಟ್ರೀಟ್ ಬಗೆ ಬಗೆ ಭಕ್ಷ್ಯಗಳು...ಅಯ್ಯೋ ಏನೇನೆಲ್ಲ ಬಿಟ್ಟು ಹೋಗಬೇಕೋ ದೇವನೇ! ಇವೆಲ್ಲ ಬೇರೆ ಕಡೆನೂ ಸಿಗಬಹುದು, ಅಥವಾ ಇದಕ್ಕಿಂತ ಚೆನ್ನಾಗಿರಬಹುದು. ಆದ್ರೆ ಈ "ಇವುಗಳು" ಕೊಡೊ ಮುದ ಬೇರೆ ಏನೂ ಕೊಡಕ್ಕಾಗದೆ ಇರಬಹುದು! :)

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ, ಜೀವನೋಪಾಯ ಹುಡುಕ್ಕೊಂಡು ಮಾಯಾನಗರಿ ಬೆಂಗಳೂರಿಗೆ ಹೊರಡೋದಕ್ಕೆ ನನ್ನನ್ನು ನಾನು ತಯಾರು ಮಾಡಿಕೊಳ್ತಾ ಇದ್ದೀನಿ! ಮೈಸೂರು ನಂಗೆ ಎಷ್ಟು ಒಳ್ಳೇ ರೀತೀಲಿ ಬೇಕಾದಷ್ಟು ವಿಷಯಗಳನ್ನು ಕಲಿಸಿದೆಯೋ, ಅದೇ ರೀತಿ ಬೆಂಗಳೂರು ಮಾಡುತ್ತ ಅನ್ನೋದು ನನ್ನ ಮುಂದಿರುವ ಪ್ರಶ್ನೆ! ಅದು ನನ್ನನ್ನು ಅಪ್ಪಿಕೊಳ್ಳದಿದ್ದರೂ ಸೈ, ಸುಮ್ಮನೆ ಒಪ್ಪಿಕೊಂಡರೆ ಸಾಕು :)
ನನಗಲ್ಲಿ ಒಳಿತಾಗದಿದ್ದರೂ ಚಿಂತಿಲ್ಲ, ಕೆಡುಕಾಗದಿದ್ದರೆ ಸಾಕು! ವೈಪರೀತ್ಯ ನೋಡಿ, ಜೀವನ ಹುಡುಕ್ಕೊಂಡು, ಜೀವದ ಊರನ್ನು ಬಿಡೋ ಥರ ಆಗಿದೆ ಪರಿಸ್ಥಿತಿ! ಒಮ್ಮೆ ಯೋಚನೆ ಬರೋದು ಹೇಗೆ ಅಂದ್ರೆ, ಬಯಲು ನಾಡು ಮೈಸೂರನ್ನ ಇಷ್ಟು ಪ್ರೀತಿಸೋ ನನಗೆ ಹೀಗನ್ನಿಸುವಾಗ, ಮಲೆನಾಡು-ಕರಾವಳಿ ಮಂದಿ ಅದ್ಹೇಗೆ ಇರ್ತಾರೋ ಅಂತ! ಅಂತಹವರನ್ನ ನೋಡ್ಕೊಂಡ್ ಸಮಾಧಾನ ಮಾಡ್ಕೊಬೇಕು ಅಷ್ಟೇ!

ಬೈ "MY"ಸೂರು!