Saturday, January 9, 2010

ಶಿರಾಡಿಯಲ್ಲೊಂದು ಪಯಣ..

  ಆಹ್..ಪರೀಕ್ಷೆಗಳು ಮುಗಿದೇ ಹೋದವು.. ೯೫% ಇಂಜಿನಿಯರಿಂಗ್ ಮುಗ್ಸಿಯೇಬಿಟ್ಟೆ! ಪರೀಕ್ಷೆಗೆ ಓದಿ ಓದಿ (!) ಸುಸ್ತಾಗಿತ್ತು. ಮೈಸೂರು ಬೆಂಗಳೂರ ಹಾದಿಯನ್ನೇ ಹಿಡೀತಾ ಇರೋದು ನನ್ನ ಸುಸ್ತಿಗೆ ಬೇಜಾರಿಗೆ  ಇನ್ನೊಂಚೂರು ಕುಮ್ಮಕ್ಕು ಕೊಡ್ತಾ ಇತ್ತು.. ಮುಂಚೆ ಎಲ್ಲ..ಯಾಕೆ ಈಗ್ಗೆ ೫ ವರ್ಷಗಳ ಕೆಳಗೆ ರಾತ್ರಿ ೮ ಗಂಟೆ ಆಯ್ತು ಅಂದ್ರೆ ಸಾಕು, ಮೈಸೂರಿನ ಬೀದಿ ಬೀದಿಗಳೂ ಬಿಕೋ ಅಂತಿದ್ವು. ಅಷ್ಟು reserved ಆಗಿದ್ರು ಜನ. ಆದ್ರೆ ಈಗ, ಯಾವ್ದಾದ್ರೂ ಮುಖ್ಯ ರಸ್ತೆ ಬದೀಲಿ ಮನೆ ಮಾಡ್ಕೊಂಡ್ಬಿಟ್ರೆ  ದೇವ್ರೇ ಗತಿ! ಎಲ್ಲಿಗಾದ್ರೂ ಹೋಗ್ಬೇಕು ಅಂದ್ರೆ ೫ ನಿಮಿಷ ಮುಂಚೆ ಪ್ಲಾನ್ ಮಾಡಿದರೂ ಸಾಕಿತ್ತು ಆಗ, ಆರಾಮಾಗಿ ಹೋಗಿ ಬರಬಹುದಿತ್ತು. ಈಗ ಹಿಂದಿನ ದಿನವೇ ಪ್ಲಾನ್ ಮಾಡಿ ಹೊರಡಬೇಕು. ಸಾಕ್ಷಿ ಕೇಳ್ತೀರಾ? ಮೊದಲೆಲ್ಲ ಮೈಸೂರಿಂದ ಕೆ.ಆರ್.ನಗರಕ್ಕೆ ೧ ಗಂಟೆಯಲ್ಲಿ ಹೋಗಬಹುದಿತ್ತು. ಈಗ ಅದು ಇನ್ನೊಂದರ್ಧ ಗಂಟೆ ಜಾಸ್ತಿಯಾಗುತ್ತೆ! ಯಾಕಂದ್ರೆ, ಮೈಸೂರಿನ ಮುಖ್ಯ ಬಸ್ ನಿಲ್ದಾಣದಿಂದ ಹಿನಕಲ್ ದಾಟಿ ಮುಂದೆ ಹೋಗೋದಕ್ಕೆ ೧೧ ಸಿಗ್ನಲ್ ಗಳ ಲಕ್ಷ್ಮಣ ರೇಖೆ! ಹಿಂಗೆಲ್ಲ ಇದ್ರೆ ಯಾರ್  ತಾನೇ ನಖಶಿಖಾಂತ ಉರ್ಕೊಳಲ್ಲ ಹೇಳಿ.. ಹಂಗಾಗೆ ನಾನು ಆಗಾಗ ಎಲ್ಲಾದ್ರೂ ಕಾಡು ಮೇಡು ಅಲೆಯೋಕೆ ಹೋಗೋದು. ನನ್ ಸ್ನೇಹಿತರೆಲ್ಲ ಬೈತಾರೆ ನನ್ನ ಕಾಡು ಪ್ರಾಣಿ ಅಂತ..ಆದ್ರೆ "ಕತ್ತೆ ಬಲ್ಲುದೆ ಕಸ್ತೂರಿ ಸುವಾಸನೆಯ" ಅಂದ್ಕೊಂಡು ಸುಮ್ನಾಗ್ಬಿಡ್ತೀನಿ.


  ಅರೆ ಬೆಟ್ಟ ರೈಲ್ವೆ ಸ್ಟೇಷನ್ನಿಂದ ಕಾಣೋ ದೃಶ್ಯ.

ಈ ಬಾರಿ ಪರೀಕ್ಷೆಗಳು ನಡೀತಿರ್ವಾಗ್ಲೇನೆ ಒಂದ್ subject ಗೆ ೧ ವಾರ ರಜ ಸಿಕ್ತು. ಆಗ್ಲೇ ಏನೋ ದೇವರ ಕೃಪೆಯಿಂದ, ನನ್ ಗೆಳೆಯ ಸುಮಂತ್ ನ ತಂದೆ ರೈಲ್ವೆಯಲ್ಲಿ ಕೆಲಸ ಮಾಡೋದ್ರಿಂದ, ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೂ inspection car ನಲ್ಲಿ ಹೋಗೋ ಪುಣ್ಯ ಪ್ರಾಪ್ತಿಯಾಯ್ತು. ಅಬ್ಬಾ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ಹಂಗಿದೆ ಜಾಗ ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ. ಸುಮ್ನೆ ರೈಲಲ್ಲಿ ಹೋಗಿ ಬಂದದ್ದಾಯಿತು ಆಗ. ಆದ್ರೆ ತಲೆ ತುಂಬಾ ಬರೀ ಅವೇ, ಆ ಬೃಹತ್ ಪರ್ವತಗಳೇ ತುಂಬಿವೆ! ಕೊನೆ ಪರೀಕ್ಷೆನ ಹೆಂಗೆ ಬರೆದ್ನೋ ಆ ಪರಮಾತ್ಮನಿಗೇ ಗೊತ್ತು.
ಕೊನೆ ಪರೀಕ್ಷೆ ಹಿಂದಿನ ದಿನ ನನ್ ಇನ್ನೊಬ್ಬ ಸ್ನೇಹಿತ ಬಾಲಾಜಿ ಫೋನ್ ಮಾಡಿ ತಾನು ಶಿರಾಡಿ ಘಾಟಿಯ ಅರೆ ಬೆಟ್ಟಕ್ಕೆ trek ಹೋಗಣ ಅಂದ್ಕೊಂಡಿದ್ದೀನಿ ಅಂದ. ಅವನ ಜೊತೆ ಅವನ ಇನ್ನೊಬ್ಬ ಗೆಳೆಯ ಹೊರಡ್ತಿದ್ದಾನೆ ಅಂತಿತ್ತು ಅವನ ಅಂಬೋಣ! ನನ್ ಮನಸ್ಸು ಈ ಕಡೆ ಪುಕ ಪುಕ ಅಂತಿತ್ತು.. ಛಾನ್ಸ್ ಸಿಕ್ಕಿದ್ರೆ ಅವನ ಗೆಳೆಯನ ಬದ್ಲು ನಾ ಹೋಗಬಹುದಿತ್ತು ಅಂತ! ಕಡೆಗೆ ಅವನೂ ಹಂಗೆ ಅಂದ. I was very happy :P ನಮ್ ಜೊತೆಗೆ ಆಕಾಶ್ ಕೂಡ ಬರ್ತೀನಿ ಅಂದ.. ಸರಿ ಶುರುವಾಯ್ತು ನಮ್ ಪ್ರಯಾಣ..
04/01/2010, ರಾತ್ರಿ ೧೧.೦೦ ಗಂಟೆಗೆ ಧರ್ಮಸ್ಥಳಕ್ಕೆ ಹೋಗೋ ರಾಜಹಂಸ ಬಸ್ಸು ನಮಗಾಗಿ ಕಾಯುತ್ತಿತ್ತು. ಬಸ್ ಟಿಕೆಟ್ ಬುಕ್ ಮಾಡ್ಸಿಲ್ಲ..ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಬೇರೆ ಇತ್ತು. ಪುಣ್ಯಕ್ಕೆ, ರಿಸರ್ವ್ ಮಾಡ್ಸಿದ್ ೩ ಜನ ಪುಣ್ಯಾತ್ಮರು ಬಂದಿರಲಿಲ್ಲ..ಹಂಗಾಗಿ ಮೊದಲ ೩ ಸೀಟ್ಗಳೇ  ಸಿಕ್ಕವು.
"ಗುಂಡ್ಯ ೩ ಕೊಡಿ ಸಾರ್! ಸಾರ್ ಹಂಗೆ, ಗುಂಡ್ಯ ಬಂದಾಗ ಚೂರು ಎಬ್ಬಿಸ್ಬಿಡಿ ಸಾರ್!"
"ಆಯ್ತು ಕಣ್ರೀ!"
  ಹಾಸನದವರೆಗೂ ಪ್ರಯಾಣದ ಅನುಭವವೇ ಆಗ್ಲಿಲ್ಲ. ರಸ್ತೆ ನಿಜವಾಗಿ ಚೆನ್ನಾಗಿದೆ. ಅಲ್ಲಿಂದ ಸಕಲೇಶಪುರದವರೆಗೆ ಪರವಾಗಿಲ್ಲ. ಆಮೇಲಿಂದ ಯಾರದ್ರೂ ಬಸುರಿ ಹೆಂಗಸು ಪ್ರಯಾಣ ಮಾಡಿದ್ರೆ, ರಸ್ತೆಯಲ್ಲೇ ಮಗು ಹೆರೋ ಸನ್ನಿವೇಶ ಬರಬಹುದಾದಂಥ  ಘೋರ ಪರಿಸ್ಥಿತಿಯಲ್ಲಿದೆ. ಸಕಲೇಶಪುರದಲ್ಲಿ ಬಿಸಿ ಬಿಸಿ ಕಾಪಿ ಹೀರಿ ಮತ್ತೆ ಬಸ್ ಹತ್ತಿದ್ವಿ. ನಿದ್ದೆ ಅಂತೂ ಈ ಹಾಳಾದ್ ರಸ್ತೇಲಿ ಹತ್ರಕ್ಕೂ ಸುಳಿಯಲ್ಲ ಅಂತ ನಾವೂ ಕೂಡ ಡ್ರೈವರ್ ಕ್ಯಾಬಿನ್ ನಲ್ಲೆ ಕೂತ್ವಿ. ಡ್ರೈವರ್ ಜೊತೆ ಎಲ್ಲ ಥರದ ವಿಷಯಗಳನ್ನೂ ಮಾತಾಡ್ಕೊಂಡು ಕೂತಿದ್ವಿ. ಭಾಳ ತಿಳ್ಕೊಂಡಿದ್ದ ಮನುಷ್ಯ!  ನೋಡ ನೋಡುತ್ತಿದ್ದ ಹಂಗೇ ಗುಂಡ್ಯ ಬಂದೇ ಬಿಡ್ತು! ಇಳಿದ್ವಿ..ಸುಮಾರು ೪.೧೫ ಗಂಟೆ ಆಗ. ಅಷ್ಟು ಹೊತ್ತಲ್ಲಿ ಟಿಕೆಟ್ ಚೆಕಿಂಗ್ ಅಂತ ಬಂದ್ರು ಇಬ್ರು. ನಾನಂತೂ ಬೈಕೊಂಡೆ ಮನಸ್ಸಲ್ಲೇ ಚೆನ್ನಾಗಿ. ಮನುಷ್ಯರಿಗೆ ನಿದ್ದೆ ಬರೋದೇ ಮುಂಜಾವಿನಲ್ಲಿ. ಅದನ್ನೂ ಹಾಳ್ ಮಾಡಕ್ಕೆ ಬಂದಿದ್ದಾನಲ್ಲ ಅಂತ! ನಮ್ ಟಿಕೆಟ್ ತೋರಿಸಿ ಹೊರಟ್ವಿ ನಾವು. ಚೆಕ್ ಪೋಸ್ಟ್ನಲ್ಲಿ ಒಬ್ಬ ಆಸಾಮಿ ಪೋಲೀಸು, ಆರಾಮಾಗಿ ಗೊರಕೆ ಹೊಡೀತಿದ್ದ. ಅಣ್ಣ, ಗುಂಡ್ಯ ಫಾರೆಸ್ಟ್ ಐ.ಬಿ.ಗೆ ಹೆಂಗೆ ಹೋಗ್ಬೇಕು ಅಂತ ಚುಮು ಚುಮು ಚಳೀಲಿ ನಡುಗಿಕೊಂಡು ಕೇಳಿದ್ರೆ, ಅದಕ್ಕೆ ಸುಬ್ರಹ್ಮಣ್ಯಕ್ಕೆ ಹೋಗ್ಬೇಕು ಅಂದ್ಬಿಡೋದೇ ಆತ? ನಮಗೆ ಎದೆ ಡಮ್ ಅಂದ್ಬಿಡ್ತು ಒಂದ್ ಕ್ಷಣ. ಪಕ್ಕದಲ್ಲೇ ಒಂದು ಹೋಟೆಲಿನವರು ಎದ್ದಿದ್ರು. ಅವರನ್ನ ಕೇಳಿದ್ದಕ್ಕೆ, ಇದೆ ರಸ್ತೇಲಿ ಹೋದ್ರೆ ಮುಂದೆ ಕೆಂಪು ಹೊಳೆ ಸೇತುವೆ ಸಿಗುತ್ತೆ. ಅಲ್ಲಿಂದ ಸ್ವಲ್ಪ ಮುಂದೆ ಅಂತ ತನ್ನ ಕನ್ನಡ-ಮಲಯಾಳಂ ಮಿಶ್ರಿತ ಭಾಷೇಲಿ ಹೇಳಿದ. ನೋಡಿ ನಮ್ ಹಣೆಬರಹ. ಕರ್ನಾಟಕದ ಮಧ್ಯದಲ್ಲಿ ಮಲಯಾಳಿಗಳ ದರ್ಬಾರು! ತುಳು ನಾಡು ಬೇಕು ಅಂತ ಕೂಗೋ ಜನ ಅವರ ಸ್ಥಳವನ್ನ ಜೋಪಾನ ಮಾಡ್ಕೋಬೇಕೋ ಬೇಡವೋ? ಹುಡುಕಿದರೂ ಒಬ್ರೂ ಕನ್ನಡದವರಿಲ್ಲ, ತುಳುವರೂ ಇಲ್ಲ! ಐ.ಬಿ. ಹತ್ರ ಹೋದಾಗ ಅಲ್ಲಿ ಕನ್ನಡದವರು ತುಳುವರೂ ಇದ್ದದ್ದು ಗೊತ್ತಾಯ್ತು! ಈಗ ಇನ್ನೊಂದ್ ತೊಂದ್ರೆ ಎದುರಾಯ್ತು! ಐ.ಬಿ. ಕಾವಲುಗಾರ ಕೋಣೆಗೆ ಬೀಗ ಜಡಿದುಕೊಂಡು ಮಲಗಿದ್ದ! ಎಬ್ಬಿಸೋದಕ್ಕೆ ಮನಸ್ಸು ಬರ್ಲಿಲ್ಲ.. ಹಂಗಾಗಿ ೬ ಗಂಟೆವರೆಗೂ ಅಲ್ಲೇ ಸೇತುವೆ ಮೇಲೆ ಕೂತ್ಕೊಂಡು ಚಂದ್ರ ತಾರೆಗಳನ್ನ ನೋಡ್ತಾ ಇದ್ವಿ..


  ಸೇತುವೆ ಬಳಿಯಿಂದ ಕಾಣೋ ವೆಂಕಟಗಿರಿಯ ದೃಶ್ಯ.

ಸ್ವಲ್ಪ ಹೊತ್ತಾದ ಮೇಲೆ ಹೋಗಿ, ಆ ಕಾವಲುಗಾರನ ಬಳಿ ಮಾತಾಡಿ ರೂಂ ಪಡೆದೆವು.ಆಕಾಶ್ ಮಲಕ್ಕೊಂಡ. ನಾನೂ ಬಾಲಾಜಿ ಇಬ್ರೂ ಕೆಂಪು ಹೊಳೆಯಲ್ಲಿ ಆಡಿ ಬಿದ್ದು ಬಂದೆವು!

ಕೆಂಪು ಹೊಳೆಯೊಳಗೆ..
  ಕಾವಲುಗಾರನೇ ನಮಗೆ ಗೈಡ್ ಹುಡುಕಿಕೊಟ್ಟ. ದೇವಪ್ಪ ಅಂತ ಅವರ ಹೆಸರು..ಕೇವಲ ೭೦ ವರ್ಷದ ಯುವಕ! :)

ದೇವಪ್ಪ 
  ಸ್ನಾನ ಮಾಡಿ ಅಲ್ಲೇ ಕೈರಳೀ ಹೋಟೆಲ್ನಲ್ಲಿ ತಿಂಡಿ ತಿಂದು, ಮದ್ಯಾಹ್ನಕ್ಕೊಂದಿಷ್ಟು ಕಟ್ಟಿಸ್ಕೊಂಡು ನಮ್ ಟ್ರೆಕ್ ಶುರು ಮಾಡಿದ್ವಿ.
ದೇವಪ್ಪನವರ ಮುಂದಾಳತ್ವದಲ್ಲಿ ಹೊರಟೆವು. ಮೊದಲಿಗೆ ಅರೆಬೆಟ್ಟ ಅಂತ ನಿರ್ಧಾರ ಮಾಡಿದ್ವಿ. ಈ ಬೆಟ್ಟಕ್ಕೆ ಹೋಗುವಾಗ ಮೊದಲಿಗೆ ಸಿಗೋದು ಐಜಿಬೆನ್ದು ಅಂತಲೋ ಏನೋ ಒಂದು ಪಕ್ಕಾ ತುಳುವ ಶೈಲಿಯ ಹಳ್ಳಿ. ದಟ್ಟ ಕಾಡಿನ ಮಧ್ಯ, ಮೂರು ನಾಲ್ಕು ಮನೆಗಳು, ಎರಡು ಗುಡಿಗಳು...ಸುಮಾರು ಎಕರೆ ಅಡಿಕೆ ತೋಟ!ಇಷ್ಟೇ ಆ ಹಳ್ಳಿ, ಭೌಗೋಳಿಕವಾಗಿ ಮಾತ್ರ! ಮಾನಸಿಕವಾಗಿ ಅದು ನಮ್ಮಂಥವರಿಗೆ ಶಾಂತಿಯನ್ನೀವ ಸುರಧಾಮವೇ ಸೈ. ಹಳ್ಳಿಯನ್ನು ದಾಟಿ ಕಾಡಿನ ಮಧ್ಯದಲ್ಲಿ ಪಯಣ.

 ಕಾಡು ದಾರಿ
ಅಸರೆಗೆಂದು ದೇವಪ್ಪ ಎಲ್ಲರಿಗೂ ಒಂದೊಂದು ಕೋಲು ಕೊಟ್ಟರು. ಹೇಳ್ತೇನೆ ಕೇಳಿ, ಖಂಡಿತವಾಗಿಯೂ ನಮ್ಮ ತಲೆಮಾರಿಗಿಂತ ದೇವಪ್ಪನಂಥವರು ಸಾವಿರ ಪಾಲು ಮೇಲು. ನಾವು ಸಾವಿರಾರು ರೂಗಳ ಬ್ರಾಂಡೆಡ್ ಶೂ ಹಾಕಿಯೂ ಲೆಕ್ಕವಿಲ್ಲದಷ್ಟು ಬಾರಿ ಮಣ್ಣು ಮೂಸಿದೆವು! ಆದ್ರೆ ದೇವಪ್ಪ, ಸಾಧಾರಣ ಹವಾಯ್ ಚಪ್ಪಲಿ ಹಾಕಿದ್ರೂ ಒಂದು ಕಡೆ ಕೂಡ ಜಾರಲೂ ಇಲ್ಲ! ಹ್ಹ..ಬಿಡಿ ಆ ವಿಷಯ ಈಗ. ಕಾಡು ಸುಮಾರು ೭೦ ಡಿಗ್ರೀ ಓರೆಯಾಗಿತ್ತು. ಕಂಡು ಕೇಳರಿಯದ ಸಸ್ಯ ಜಾತಿ, ಪಕ್ಷಿಗಳ ಕೂಗು, ಮಧ್ಯೆ ಮಧ್ಯೆ ಬೆಂಗಳೂರು-ಮಂಗಳೂರು ರೈಲಿನ ಕೂಗು, ಇವೆಲ್ಲವೂ ನಮ್ಮನ್ನ ಬೇರೆಯದೇ ಒಂದು ಪ್ರಪಂಚಕ್ಕೆ ಕರೆದೊಯ್ದವು. ಕಾಡು ಹತ್ತುತ್ತಲೇ ಸುಮಾರು ೩ ಕಿ.ಮೀ. ನಂತರ ರೈಲು ಹಳಿ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ರೈಲು ಹಳಿಯ ಮೇಲೆ ನಡೆದರೆ ಅರೆಬೆಟ್ಟ ರೈಲ್ವೆ ಸ್ಟೇಷನ್ ಸಿಗುತ್ತೆ. ಇನ್ನೊಂದು ಹೇಳಲೇಬೇಕಾದ ಅಂಶವೆಂದರೆ, ಸಕಲೇಶಪುರದಿಂದ ಸುಬ್ರಹ್ಮಣ್ಯ ಕೇವಲ ೪೫ ಕಿ.ಮೀ ದೂರ ಅಷ್ಟೇ. ಈ ದೂರದಲ್ಲಿ ೫೬ ಸುರಂಗಗಳು, ೩೩೦ ಸೇತುವೆಗಳು ಇವೆ ಎಂದರೆ ನೀವು ನಂಬಲೇಬೇಕು!

 ಸುರಂಗದೊಳಗೆ..

ಅರೆಬೆಟ್ಟ 
  ಅರೆಬೆಟ್ಟ ಸ್ಟೇಷನ್ ನಿಂದ ಆಚೆ ಬದಿಯಲ್ಲಿ ಮುಗಿಲಗಿರಿ, ಗಡಿ ಗುಡ್ಡ ಮತ್ತು ಅರಮನೆ ಗದ್ದೆ ದಾರಿಗಳು ಬಹಳ ರಮಣೀಯವಾಗಿ ಕಾಣುತ್ತವೆ. ಈಚೆ ಬದಿ ಋಷ್ಯಮೂಕ ಪರ್ವತ, ಮೇತಿಕಲ್ಲು ಗುಡ್ಡ ಮತ್ತು ವೆಂಕಟಗಿರಿ ಪರ್ವತಗಳು ಇವೆ. ಅಲ್ಲೇ ಕುಳಿತು ಮದ್ಯಾಹ್ನದ ಹೊಟ್ಟೆ ಪಾಡು ಮುಗಿಸಿ ಕೊಂಚ ಹೊತ್ತು ಸುಧಾರಿಸಿ ಮತ್ತೆ ವಾಪಾಸ್ ಹೊರಟೆವು. ಈಗ ಹೊರಟದ್ದು ರೈಲ್ವೇಯವರು ಕಾಡು ಕಡಿದು ಮಾಡಿರುವ ಮಣ್ಣು ರಸ್ತೆಯಲ್ಲಿ. ಸುಮಾರು ೯ ಕಿ.ಮೀ. ದೂರದ ನಡಿಗೆ! ದೃಶ್ಯಗಳು ಕಣ್ಣಿಗೆ ಹಿತವೆನಿಸಿದರೂ ಕಾಲುಗಳು ಅಳುತ್ತಿದ್ದವು ಅದಾಗಲೇ!

 ಲತೆ!
  ಹೆಂಗೋ ಕಷ್ಟ ಪಟ್ಟು ಐ.ಬಿ. ತಲುಪಿದೆವು. ಸ್ನಾನ ಮುಗಿಸಿ ಮಡಿ ಬಟ್ಟೆ ತೊಟ್ಟು ಸುಬ್ರಹ್ಮಣ್ಯಕ್ಕೆ ಹೋಗಿ ದರ್ಶನ ಮುಗಿಸಿ ಬಂದು ಮಲಗಿದೆವು. ಹಾಯ್ ಎನಿಸುವಷ್ಟು ಆರಾಮ. infact ನಾವು ಸುಬ್ರಹ್ಮಣ್ಯಕ್ಕೆ ಹೋಗ್ಬೇಕು ಅಂತಲೇ ಇದ್ದದ್ದು ಮೊದ್ಲು. ಆಮೇಲೆ ಅದು ಅರೆಬೆಟ್ಟ ಅಂತ ಹೆಸರು ಪಡೀತು..
  ಒಳ್ಳೇ ನಿದ್ದೆ ಆಯ್ತು. ಬೆಳಿಗ್ಗೆ ಮುಗಿಲಗಿರಿಗೆ ಹೋಗೋದು ಅಂತ ಅರೆಬೆಟ್ಟದಿಂದ ಬರುವಾಗಲೇ ಡಿಸೈಡ್ ಮಾಡಿದ್ವಿ. ಹಂಗಾಗಿ ದೇವಪ್ಪ ಬೇಗ ಹೊರಡಬೇಕು, ಸಂಜೆ ಆದರೆ ಪ್ರಾಣಿಗಳು ಓಡಾಡಕ್ಕೆ ಶುರು ಮಾಡುತ್ವೆ ಅಂತ ಮುನ್ನೆಚ್ಚರಿಕೆ ಬೇರೆ ಕೊಟ್ರು. ಸರಿ ಬೇಗ ಬೇಗ ತಯಾರಾದೆವು. ಅರೆಬೆಟ್ಟಕ್ಕಿಂತ  ಮುಗಿಲಗಿರಿ ಒಂಥರಾ ಹುಚ್ಚೆಬ್ಬಿಸಿತ್ತು ನಮ್ಮನ್ನ. ಎತ್ತರವಾಗಿ ಬಹಳ ದೂರದಿಂದ ಕಾಣುವ ಅಚಲವೇ ಮುಗಿಲಗಿರಿ. ಆಹ್..ನೆನೆಸಿಕೊಂಡರೆ ಈಗ್ಲೂ ರೋಮಾಂಚನ ಆಗುತ್ತೆ. ತಿಂಡಿ ತಿಂದು ಮದ್ಯಾಹ್ನಕ್ಕೂ ತಗೊಂಡು ಒಂದಷ್ಟು ಪಾಪಿನ್ಸ್ ತಗಂಡು ಹೊರಟ್ವಿ. NH48 ದಾಟಿ ಕಾಡಿನೊಳಕ್ಕೆ ನುಗ್ಗಿದೆವು. ಅದೆಷ್ಟು ದೂರ ಕಾಡಿನಲ್ಲೇ ನಡೆದೆವೋ ಗೊತ್ತಿಲ್ಲ. ಆದ್ರೆ ಸುಸ್ತಂತೂ ತುಂಬಾ ಆಗ್ತಿತ್ತು. ಅರೆಬೆಟ್ಟಕ್ಕಿಂತ  ತೀರ ಕಷ್ಟಕರವಾಗಿತ್ತು. ಜಾರುವ ಮಣ್ಣು, ಮುಳ್ಳುಗಳು, ಕಾಲಿಗೆ ಸಿಗುವ ಬಳ್ಳಿಗಳು!

!!

 
 
 ಅಲ್ಲಲ್ಲಿ ಹಿಡಿದದ್ದು..
  ಬಹಳ ಕಷ್ಟದಿಂದ ಅಂದಾಜು ಒಂದು ೪ ಕಿ.ಮೀ ಬೆಟ್ಟ ಹತ್ತಿರಬಹುದು ನಾವು. ಆಮೇಲೆ ಹುಲ್ಲುಗಾವಲು ಸಿಕ್ಕಿತು. ನಮಗಿಂತ ಎತ್ತರಕ್ಕೆ ಬೆಳೆದು ನಿಂತ, ಗಾಳಿಗೆ ನಮಸ್ಕರಿಸುವ, ಚರ್ಮ ಸೀಳುವ ಹುಲ್ಲು! ಇದು ಇನ್ನೂ ಕಷ್ಟವೆನ್ದೆನಿಸಿತು, ಯಾಕಂದ್ರೆ ಹೆಜ್ಜೆ ಇಟ್ಟರೆ ಹುಲ್ಲು ಜಾರ್ತಿತ್ತು. ಹುಲ್ಲುಗಾವಲಿನಲ್ಲಿ ಸುಮಾರು ೧ ರಿಂದ ೨ ಕಿ.ಮೀ ನಡೆದೆವೇನೋ.. ಒಂದು ದೊಡ್ಡ ಬಂಡೆ ಸಿಕ್ಕಿತು. ಅಲ್ಲಿ ಸ್ವಲ್ಪ ವಿಶ್ರಮಿಸಿ ಮುಂದೆ ಹೊರಟೆವು.

 ಸೇತುವೆ ಬಳಿಯಿಂದ ಕಾಣುವ ಮುಗಿಲಗಿರಿಯ ಮನೋಹರ ದೃಶ್ಯ.
  ತುದಿಯನ್ನು ಮುಟ್ಟುವ ತವಕದಲ್ಲಿ ನಾವಿದ್ದೆವು. ಆದರೆ ದೇವಪ್ಪ ಅಲ್ಲಿಗೆ ಹೋಗೋದು ಬೇಡ ಮತ್ತು ತನಗೆ ಕಾಲು ನೋವೆಂದು ಹೇಳಿದ್ರು. ಹಂಗಾಗಿ ನಾವೂ ಸುಮ್ನಾದ್ವು. ಆ ಬಂಡೆ ಮೇಲೆ ಕೂತಿದ್ದಾಗ, ಸುಮಾರು ದೂರದಲ್ಲಿ ಒಂದು ಕಡವೆ ಕಾಣಿಸಿತು. ಅದಲ್ಲದೆ ಆನೆಯ ಲದ್ದಿ ಹೆಜ್ಜೆ ಹೆಜ್ಜೆಗೂ ಸಿಗುತ್ತಿತ್ತು. ಪುಣ್ಯಕ್ಕೆ ಯಾವುದೂ ಎದುರಾಗಲಿಲ್ಲ! ಈ ಮುಗಿಲಗಿರಿಯಿಂದ ಅರೆಬೆಟ್ಟ, ಋಷ್ಯಮೂಕ ಪರ್ವತ, ಮೇತಿಕಲ್ಲು ಗುಡ್ಡ ಮತ್ತು ವೆಂಕಟಗಿರಿಗಳು ಭವ್ಯವಾಗಿ ಕಾಣುತ್ತವೆ. ಅವಲ್ಲದೆ, ಚಾರ್ಮಾಡಿ ಘಾಟಿಯ ಕಡೆಗೆ, ಶಿಶಿಲ ಪರ್ವತ, ಒಂಬತ್ತು ಗುಡ್ಡ, ಅರಮನೆ ಗದ್ದೆ, ಅಮೇದಿಕಲ್ಲು, ಎತ್ತಿನ ಭುಜ ಪರ್ವತ ಮತ್ತು ಕೊಂಚ ಕುದುರೆಮುಖದ ದರ್ಶನವಾಯಿತು.ದೇವರ ದಯೆಯಿಂದ ಆಕಾಶ ಶುಭ್ರವಾಗಿತ್ತು.

 
 
ಮುಗಿಲಗಿರಿ 
  ಐಡಿಯ ನೆಟ್ವರ್ಕ್ ಚೆನ್ನಾಗಿ ಸಿಗುತ್ತಿತ್ತು. ಆದ್ರಿಂದ, ಯಾರೂ ಐಡಿಯ ನೆಟ್ವರ್ಕ್ ನ ದೂಷಿಸಬೇಡಿ ಅಂತ ವಿನಮ್ರನಾಗಿ ಕೇಳಿಕೊಳ್ಳುತ್ತೇನೆ! ಆಗ ನಾವು ಸಮುದ್ರ ಮಟ್ಟದಿಂದ ಸುಮಾರು  ೧೫೦೦ ಮೀಟರ್ಗಳಿಗಿಂತಲೂ ಎತ್ತರದಲ್ಲಿದ್ವಿ. ಆಗ ಸ್ವರ್ಗಕ್ಕೆ ಮೂರು ಗೇಣು, ಈಗ ಸ್ವರ್ಗದಲ್ಲಿ ನಾವು! ಆ ಅನುಭವವನ್ನು ಪದಗಳಲ್ಲಿ ಹೇಳೋಕೆ ಆಗ್ತಿಲ್ಲ. ಏನೇ ಆದರೂ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ಸ್ವಲ್ಪ ಹೊತ್ತು ಅಲ್ಲಿ ಕೂತು, ಪುನಃ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ. ನೆರಳು ಸಿಕ್ಕಾಗ ಊಟ ಮಾಡಿದ್ವಿ. ದೇವಪ್ಪ ನೆಲ್ಲಿಕಾಯಿ ಕೀಳೋಕ್ಕೆ ಮರ ಹುಡುಕಿದರೂ ಒಂದರಲ್ಲೂ ಕಾಯಿಗಳು ಇರಲಿಲ್ಲ. ಸರಿ ಅಂತ ಇಳಿಯೋಕೆ ಆರಂಭಿಸಿದೆವು. ಆಶ್ಚರ್ಯ ಅಂದ್ರೆ, ದಾರಿಯೇ ಇಲ್ಲದ ಆ ಕಾಡಿನೊಳಗೆ ನಾವು ಯಾವ ದಾರಿಯಲ್ಲಿ ಹೋಗಿದ್ವೋ, ಅದೇ ದಾರಿಯಲ್ಲಿ ವಾಪಾಸ್ ಕರ್ಕೊಂಡು ಬಂದ್ರು ದೇವಪ್ಪ! ಅವರಿಗೊಂದು ಅಷ್ಟಾಂಗ ನಮಸ್ಕಾರ. ಮತ್ತೆ ಐ.ಬಿ. ತಲುಪಿ ಸ್ನಾನ ಮಾಡಿ  ಧರ್ಮಸ್ಥಳಕ್ಕೆ ಹೋದ್ವಿ. ದರ್ಶನ ಮಾಡಿ  ಕಾರ್ ಸಂಗ್ರಹಾಲಯ ನೋಡಿ "MY"ಸೂರಿಗೆ ಬಸ್ ಹತ್ತಿದ್ವಿ..

3 comments:

  1. ಚೆನ್ನಾಗಿ ಹೊಟ್ಟೆ ಉರಿಸಿದೀಯ! ಹೋಗೋ plan ಮಾಡಬೇಕು ಸದ್ಯದಲ್ಲೇ.
    weather ಹೇಗಿತ್ತು? ಫೋಟೋ ನೋಡಿದ್ರೆ ಬಿಸಿಲು ತುಂಬಾ ಇರೋ ಹಾಗೆ ಇದೆ. ಒಳ್ಳೇ time ಯಾವುದು ಹೋಗೋದಕ್ಕೆ?

    ReplyDelete
  2. Quite an impressing read! Nijakkoo!! Chitragalu matadtave antaralla, idakke eno!! Tejaswiyavaru bhala nenapadaru. :)

    ReplyDelete