Sunday, January 17, 2010

ಹೀಗೊಂದು ಕತೆ!

**ಅರ್ಣವ  = ಸಮುದ್ರ
ವಾಹಿನಿ = ನದಿ
ತರಂಗಿಣಿ = ಸರೋವರ


ಕಂಬಳಿಯ ಕಿಂಡಿಯೊಳಗಿಂದ ನೇಸರ ನಗೆಯಾಡುತ್ತಿದ್ದ. ಅವಮಾನವಾದಂತಾಯಿತು. ನಾ ಮಾಡಿದ ತಪ್ಪೇನು? ಬಹುಶಃ ಹೊತ್ತು ನೆತ್ತಿಗೇರಿತ್ತೋ ಏನೋ?
"ಲೋ ಅರ್ಣವಾ ಎದ್ದೇಳೋ ಮೇಲೆ..ಹೊತ್ತಾಗುತ್ತೆ.."
ಅಮ್ಮನ ಚೀರಾಟಕ್ಕೆ ಎಚ್ಚರವಾಗಿ ಎದ್ದು ಕುಳಿತಾಗ ಬರೋಬ್ಬರಿ ಪೂರ್ವಾಹ್ನದ ೧೦ ಗಂಟೆ.
"ಇನ್ ಮುಂದೆ ಈ ಥರ ಆದ್ರೆ ಬಲೆ ಕಷ್ಟ, ಸ್ವಲ್ಪ ತಿದ್ಕೋ ಮಗನೆ" - ಹಿತನುಡಿಗಳು.
ಏನೂ ಕೇಳಿಸದವನಂತೆ ಹೋಗಿ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ ಬಂದು "ಕಾಫಿ.." ಕೂಗಿದೆ. ಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿ ಟೇಪು ರೆಕಾರ್ಡರಿನಲ್ಲಿ ಹಾಡು ಕೇಳುತ್ತ ಕೂತೆ. " ಇವಳು ಯಾರು ಬಲ್ಲೆಯೇನು..ಇವಳ ಹೆಸರ ಹೇಳಲೇನು.." ಇಂಪಾದ ಹಾಡು. " ಅಣ್ಣಾ ಕಾಫೀ.." ಕೂಗುತ್ತ ಬಂದಳು ಶಾಲ್ಮಲೀ. ಅತ್ತ ಹಾಡಿನ ಕಡೆ ಗಮನ ಹೊಗಿಯೇಬಿಟ್ಟಿತು.
ನಾನು ಅರ್ಣವ್. ತಂಗಿ ಶಾಲ್ಮಲೀ. ಅಪ್ಪ ಚಂದ್ರೇಗೌಡ. ಅಮ್ಮ ವಿಜಯಮ್ಮ. ನಾಲ್ಕು ಮಂದಿಯ ಸುಖ ಸಂಸಾರ. ಊರು ಸಕಲೇಶಪುರದ ಬಳಿಯ ಮಲೆನಾಡ ಹಳ್ಳಿ. ಮೂರು ಮತ್ತೊಂದು ಮನೆಗಳು. ಪ್ರತಿಯೊಬ್ಬರಿಗೂ ಎಲ್ಲರೂ ಗೊತ್ತು. ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ನನ್ನ ನೌಕರಿ. ಜೀವನಕ್ಕಾಗುವಷ್ಟು ಕಾಫಿ ತೋಟ ಮತ್ತು ಕಂಗು. ಇನ್ನೇನೂ ಬೇಡವೆನಿಸುವಷ್ಟು ನಿರ್ಲಿಪ್ತತೆ. ತೃಪ್ತಿ. ನಾನು ಮೌನಿ. ತಂಗಿ ನನ್ನ ಮಾತೂ ಸೇರಿಸಿ ಆಡುತ್ತಿದ್ದಳು. ಮನೆಯವರಿಗೆಲ್ಲ ಮುದ್ದು..ಕುಟುಂಬದ ಮೊದಲ ಹೆಣ್ಣು ಕೂಸು ಎಂದು. ನನಗೂ ಕೂಡ.
ನೌಕರಿಗೆ ಸೇರಿ ಈಗ್ಗೆ ೨ ವರ್ಷಗಳಾಗಿದ್ದವು. ಇಲ್ಲಿಯವರೆಗೆ ನಾನು ಏನನ್ನೂ ಬಯಸಿಯೇ ಇಲ್ಲ. ಎಲ್ಲ ತಂತಾನೇ ಆಗುತ್ತಿದ್ದವು. ಮನೆಯ ಜ್ಯೇಷ್ಠ ಪುತ್ರ. ಹೆತ್ತವರ ಮನದೊಳಗೆ ಮೊಮ್ಮಗುವಾಡಿಸುವ ಬಯಕೆ. ನಾ ತಾನೇ ಹರಕೆಯ ಕುರಿ ಅದಕ್ಕೆ.. ಸರಿ ಒಪ್ಪಿದೆ. ಮನಸ್ಸಿಗೆ ಕೊಂಚ ಕಷ್ಟವಾಗತೊಡಗಿತು. "ಸಂಸಾರ, ಮಕ್ಕಳು, ಹೆಂಡತಿ, ಜವಾಬ್ದಾರಿ..ಯಾಕೆ ಬೇಕು ಇವೆಲ್ಲ?"
ಮರುಕ್ಷಣ ಅಪ್ಪ-ಅಮ್ಮಂದಿರ ಚಿತ್ರಣ. ಇದುವರೆಗೂ ನನಗಾಗಿ ಬದುಕಿದವನಲ್ಲ. ಈಗಲೂ ಹಾಗೆಯೆ ಅಂದುಕೊಂಡರಾಯಿತು. ಸಮಸ್ಯೆಗೆ ನಾನೇ ಕಂಡುಕೊಂಡ ಪರಿಹಾರ.
ಪತ್ರ ಬಂದಿತು..ಹಳ್ಳಿಯಲ್ಲಿ ಫೋನ್ ಇಲ್ಲವಾದ್ದರಿಂದ ಪತ್ರ. 
" ಕ್ಷೇಮ.
ನೀನೂ ಕ್ಷೇಮವಷ್ಟೇ. ನಮಗೆ ಸೊಸೆಯನ್ನು ನೋಡಲು ಹೋಗುತ್ತಿದ್ದೇವೆ. ನಿನ್ನ ಅಮ್ಮನೂ ಕೆಲಸಗಳನ್ನು ಮಾಡಿ ದಣಿಯುತ್ತಿರುತ್ತಾಳೆ . ಅವಳಿಗೂ ಸಹಾಯವಾದಂತಾಗುತ್ತದೆ. ಕುಶಾಲನಗರದ ಬಳಿಯ ಕಟ್ಟೆಪುರದವರು. ಸ್ಥಿತಿವಂತರು. ನಮ್ಮ ಅಂತಸ್ತಿಗೆ ಸರಿ ಹೊಂದುವರು. ನಿನ್ನ ಆಕ್ಷೇಪವಿಲ್ಲವೆಂದು ಬಲ್ಲೆವು. ಮತ್ತೆ ಪತ್ರ ಬರೆಯುವೆ."
ದಿಗಿಲಾಯಿತು. "ಅಮ್ಮನಿಗೆ ಕೆಲಸ ಕಡಿಮೆ ಮಾಡಲು ನಾ ಮದುವೆಯಾಗಬೇಕೋ ಅಥವಾ.. " ಏನೂ ತೋಚಲಿಲ್ಲ. "ನಾ ಸ್ವಾರ್ಥಿಯಗುತ್ತಿದ್ದೇನೋ, ಅಥವಾ ಅಪ್ಪನೋ?" ಛೆ..ಎಂಥ ಸಂದಿಗ್ಧ! ಅಪ್ಪನಿಗೆ ಎದುರಾಡುವ ಹಾಗಿರಲಿಲ್ಲವೆಂದೇನಲ್ಲ, ಆದರೆ ರೂಢಿಯಿಲ್ಲ. ಅವುಡುಗಚ್ಚಿಕೊಂಡು ಸುಮ್ಮನಾದೆ. ಒಳಗೊಳಗೇ ರೆಕ್ಕೆ ಕತ್ತರಿಸಿದ ಹಕ್ಕಿಯ ಯಾತನೆ. "ನನ್ನ ವ್ಯಕ್ತಿತ್ವಕ್ಕೆ ಬೆಲೆಯೇ ಇಲ್ಲವೇ?" ಅವಮಾನದ ಪ್ರಶ್ನೆ, ಮನದೊಳಗೆ.
ಕೊನೆಗೂ ಅವರ ಬಯಕೆ ತೀರುವ ಕಾಲ ಬಂದೇ ಬಂತು. ಊರಿಗೆ ಬುಲಾವ್. ನಿಶ್ಚಿತಾರ್ಥವೂ ಗೊತ್ತಾಗಿತ್ತು. ಬರುವ ಸೋಮವಾರ.. ಅಂದರೆ ಇನ್ನು ೫ ದಿನ ಬಾಕಿ ಅಷ್ಟೇ. ಮನಸ್ಸಿಲ್ಲದ ಮನಸ್ಸಿನಿಂದ ಬೆಳಿಗ್ಗೆ ೬.೩೦ರ ಮೈಸೂರು-ಕೊಣನೂರು-ಸಕಲೇಶಪುರದ ಬಸ್ಸು ಹತ್ತಿ ಕಿಟಿಕಿಯ ಸೀಟು ಹಿಡಿದು ಕುಳಿತೆ. ತಲೆಯೊಳಗೆ ಯೋಚನೆ. ಮನದೊಳಗೆ ಯಾತನೆ. ಯಾರ ಬಳಿ ಹೇಳಿಕೊಳ್ಳುವುದು?
"ಮಗೂ, ಅದು ಹಿರಿಯ ನಾಗರಿಕರ ಸೀಟು..ಸ್ವಲ್ಪ ಏಳ್ತೀಯ ಮೇಲೆ?" ಒಬ್ಬ ವೃದ್ಧರ ಧ್ವನಿ. ಅದಕ್ಕೆ ಒತ್ತಾಗುವಂತೆ ಬಸ್ಸಿನಲ್ಲಿದ್ದವರ ಮುಸಿ ಮುಸಿ ನಗು. ಮತ್ತೆ ಅವಮಾನ! ನಾ ತಿಳಿಯದೆ ಮಾಡದ ತಪ್ಪಿಗೆ. ಕ್ಷಮಿಸಿ ಎನ್ನುತ್ತಾ ಬೇರೆ ಕಡೆ ಕೂತೆ. ಮನೆ ಸೇರಿ ಹೆಚ್ಚು ಮೌನಿಯಾಗಿ ನನ್ನನ್ನೇ ನಾನು ಬಿಂಬಿಸಿಕೊಳ್ಳುತ್ತ ಎಷ್ಟು ಬೇಕೋ ಅಷ್ಟನ್ನೇ ಮಾತಾಡುತ್ತ ಒಂದು ದಿನವನ್ನು ಕಷ್ಟ ಪಟ್ಟು ನೂಕಿದೆ.
ಕಾಫಿ ತಣ್ಣಗಾಗುತ್ತಿದೆ ಅನ್ನಿಸಿತು. ಎತ್ತಿ ಹೀರಿಬಿಟ್ಟೆ. ಗಷ್ಟದ ಸಮೇತ. ಆಗಲೇ ಹೊಳೆದದ್ದು ನಾ ಎಲ್ಲೋ ಕಳೆದು ಹೋಗಿದ್ದೆ ಎಂದು. ಏನು ಮಾಡಲೂ ತೋಚದೆ ತೋಟಕ್ಕಾದರೂ ಹೋಗಿ ಬರೋಣ ಎಂದು ಹೊರಟೆ. " ಲೋ ಅರ್ಣವಾ, ಸೀರೆ ಬಟ್ಟೆ ಎಲ್ಲ ತರಬೇಕು. ಎಲ್ಲೂ ಹೋಗಬೇಡ. ಹುಡುಕೋಕೆ ಆಗಲ್ಲ ಆಮೇಲೆ..ಆಳು ಮಂದಿ ಬೇರೆ ಇಲ್ಲ" ಅಮ್ಮನ ಚೀರಾಟ. "ಇಲ್ಲೇ ತೋಟಕ್ ಹೋಗಿ ಬರ್ತೇನೆ. ಸ್ವಲ್ಪ ಹೊತ್ತು ಅಷ್ಟೇ." ಮುಂದಿನದು ಹೆಜ್ಜೆಯ ಸಪ್ಪಳಗಳೇ.
ಸಪ್ಪಗೆ ಬೇಸರದ ಛಾಯೆ ಎದ್ದು ತೋರುವಂತಿತ್ತು ಮುಖ. ಮಳೆ ಆಗಷ್ಟೇ ನಿಂತಿತ್ತು...ಬಾಯಾರಿದ್ದ ಭೂಮಿಯನ್ನು ಸಾವರಿಸುವಂತೆ. ಗಿಡ ಮರಗಳ ಎಳೆಗಳು ನೀರ ಹನಿಗಳೊಂದಿಗೆ ನಗುತ್ತಿದ್ದವು. ಮತ್ತೆ ಅವಮಾನ. ಎಲ್ಲವೂ ನಗುತ್ತಿರುವಾಗ ನಾ ಯಾಕೆ ಹೀಗೆ ಎಂಬ ಅಂಶ ನನಗೂ ಹೊಳೆಯಿತು. ಆದರೆ ನಾನು ಅಸಹಾಯಕ. ಈ ಅಸಹಾಯಕತನ, ಕಡಿಮೆ ಮಾತು, ಕೊನೆಗೆ ಈ ಮದುವೆ ನಿರ್ಣಯ., ಎಲ್ಲ ಸೇರಿ ನನ್ನನ್ನು ಇನ್ನಷ್ಟು ಕೆಳಕ್ಕೆ ನೂಕಿದ್ದವು.
ನಮ್ಮ ತೋಟಕ್ಕೂ, ಹಿರೆಮನೆ ಅಪ್ಪಣ್ಣಯ್ಯನವರ ತೋಟಕ್ಕೂ ನಡುವೆ ಸಣ್ಣ ಝರಿ. ಮಳೆಗಾಲ ಬೇರೆ.. ಶೃತಿಗೆ ತಕ್ಕಂತೆ ನರ್ತಿಸುತ್ತಾ ಹರಿಯುತ್ತಿತ್ತು. ಇಲ್ಲೇ ಸ್ವಲ್ಪ ಹೊತ್ತು ಕೂರೋಣ ಎಂದು ಒಂದು ಹಾಸು ಬಂಡೆಯನ್ನು ಹುಡುಕಿ ಕೂತೆ. ಅದೇ ಮಾಮೂಲಿನಂತೆ ಯೋಚನಾಮಗ್ನನಾದೆ. ಒಂದೆರಡು ನಿಮಿಷಗಳ ಅಂತರದಲ್ಲಿ ಹೆಂಗಸರ ನಗು ಕೇಳಿತು. ಅಲ್ಲಿ ಇಲ್ಲಿ ನೋಡಿದೆ.. ಝರಿಯ ಆ ಬದಿಯಲ್ಲಿ ೫ ಹೆಂಗಸರ ಗುಂಪು.  ಅದರಲ್ಲಿ ಇಬ್ಬರು ನನ್ನನ್ನೇ ನೋಡಿ ನಗುತ್ತಿರುವುದು ಎಂದು ಅನ್ನಿಸಿತು. ಯಾಕೆ ಅಂತ ಗೊತ್ತಾಗಲಿಲ್ಲ. ಆಮೇಲೆ ಗೊತ್ತಾಯಿತು, ನನ್ನ ಚಪ್ಪಲಿ ನನಗೆ ಅರಿವಿಲ್ಲದಂತೆಯೇ ಜಾರಿ ನೀರಿಗೆ ಬಿದ್ದದ್ದನ್ನು ಅವರು ಗಮನಿಸಿದ್ದರು ಅಂತ. ಅವಮಾನವಾದಂತಾಗಿ ಎದ್ದು ಬಂದುಬಿಟ್ಟೆ. "ನನ್ನ ಚಪ್ಪಲಿ ನಾನು ಕಳಕೊಂಡ್ರೆ ಅವರಿಗೇನು ನಷ್ಟ?" ಎಂಬ ಭಂಡ ಉತ್ತರ.
ಎಷ್ಟೋ ಬಾರಿ ಈ "ಅವಮಾನ" ಎಂಬ ಪದ ಮರೀಬೇಕು ಅಂತ ಪ್ರಯತ್ನ ಪಟ್ಟಿದ್ದೀನಿ. ಕಷ್ಟ. ಬಿಟ್ಟೆ!
ಎಡಗಾಲಲ್ಲಿದ್ದ ಇನ್ನೊಂದು ಚಪ್ಪಲಿಯನ್ನೂ ಸಿಟ್ಟಿನಿಂದ ನೀರಿಗೆಸೆದು ಮೇಲೆದ್ದೆ. ನಗು ಇನ್ನೂ ಜೋರಾಯಿತು. ಭರ್ರ್ ಎಂದು ಮನೆಗೆ ಬಂದುಬಿಟ್ಟೆ. ಅಮ್ಮ, ಶಾಲ್ಮಲೀ ಅಪ್ಪ ಎಲ್ಲ ತಯಾರಾಗಿ ನನಗಾಗಿ ಕಾದು ಕುಳಿತಿದ್ದರು. ಎಲ್ಲರೂ ಹೊಸ ಜವಳಿಯ ಉತ್ಸಾಹ ಖುಷಿಯಲ್ಲಿದ್ದರು. ನಾನು ಕಳೆದುಕೊಂಡ ಚಪ್ಪಲಿ., ಅದಕ್ಕೂ ಹೆಚ್ಚಾಗಿ ಆ ಹೆಂಗಸು ಮಾಡಿದ ಅವಮಾನ- ಇದರ ಬಗ್ಗೆಯೇ ಯೋಚಿಸುತ್ತಿದ್ದೆ. ರೋಬೋಟ್ ನಂತೆ ಬಟ್ಟೆ ಬದಲಾಯಿಸಿ ಬೇರೆ ಮೆಟ್ಟು ಧರಿಸಿ ಅವರ ಜೊತೆ ಹೊರಟೆ. ಎಲ್ಲರೂ ಜವಳಿಯ ಬಣ್ಣ, ಅಂಚು ಹೀಗೆ ಏನೇನೋ ಮಾತಾಡಿ ಬರುತ್ತಿದ್ದರು. ನಾ ಮೌನಿಯಾಗಿದ್ದೆ. ಬಸ್ಸು ಹತ್ತಿ ಕೂತಾಗಲೂ ಮೌನಿ. ಕಂಡಕ್ಟರ್ ಬಂದಾಗ, "ನಾಲ್ಕು ಸಕ್ಲೇಶ್ಪುರ". ಇಷ್ಟೇ ಮಾತು. ಅಂಗಡಿಯಲ್ಲೂ ಸಹ. ಅವರು ಆರಿಸಿದ್ದಕ್ಕೆ ತಲೆ ಆಡಿಸಿದೆ. ಮದುವೆ ಹೆಣ್ಣಿಗೇ ಸುಮ್ಮನೆ ಹ್ಞೂ೦ ಅಂದವನು ಇದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳೋದು? ತಿರುಗಿ ಬರುವುದರೊಳಗೆ ಗಂಟೆ ಐದಾಗಿತ್ತು. ನಾನು ಇಲ್ಲೇ ದೇವಸ್ಥಾನದ ಬಳಿ ಹೋಗಿ ಬರುವುದಾಗಿ ಹೇಳಿ ಮನೆಯ ದಾರಿಯಿಂದ ಈ ಕಡೆಗೆ ಬಂದೆ. ದೇವಸ್ಥಾನದ ಕಟ್ಟೆಯ ಮೇಲೆ ಸುಮ್ಮನೆ ಕೂತಿದ್ದೆ. ಇದ್ದಕ್ಕಿದ್ದಂತೆ ಏನೋ ಗದ್ದಲ. " ಲೇ ವಾಹಿನಿ..ನಿಲ್ಲೇ..ನಂದು ಕಣೆ ಆ ಗೊಂಬೆ, ಕೊಡೆ..ಅಮ್ಮ..ನೋಡು.."
ಅವಳೇ, ನನ್ನ ನೋಡಿ ಝರಿ ಬದಿಯಲ್ಲಿ ಆಡಿಕೊಳ್ಳೋ ಹಾಗೆ ನಕ್ಕವಳು. ಅವಳ ಸ್ನಿಗ್ಧ ಸೌಂದರ್ಯಕ್ಕೆ ಸ್ಥಬ್ದನಾದೆ. ಮಿಂಚಿನತಹ ಕಣ್ಣುಗಳು..ಆಹ್! ನನ್ನಲ್ಲಿ ಏನಾಗುತ್ತಿತ್ತೆಂದು ನನಗೇ ತಿಳಿಯಲಿಲ್ಲ. ಏನೇನೋ ಭಾವನೆಗಳು ರೆಕ್ಕೆ ಬಿಚ್ಚಿ ಹಾರಲಾರಂಭಿಸಿದವು. "ತಪ್ಪು ಮಾಡ್ತಾ ಇದ್ದೀಯ!" ಅಂತರಾತ್ಮದ ಕೂಗು. ಕೇಳುವ ಬೋಳೀಮಗ ಯಾರು ಎಂಬ ಧಿಮಾಕು. ಅವಳು ಮಾಡಿದ ಅವಮಾನ ಈ ಭಾವನೆಯ ಮುಂದೆ ಏನೇನೂ ಇಲ್ಲ ಎನ್ನಿಸಿಬಿಟ್ಟಿತು. ಮೊದಲ ಬಾರಿ ಈ ರೀತಿಯ ಕಾರಣವೊಂದಕ್ಕೆ ಮೈ ಜುಮ್ಮೆಂದಿದೆ! ಏನೋ ಒಂದು ರೀತಿ ಸಂತೋಷ. ಮನದ ಮೂಲೆಯಲ್ಲಿ ಸಡಗರ.. ಮನೆಗೆ ಓಡಿದೆ..
ಅಮ್ಮ ನೂಲು ಹೊಸೀತಿದ್ರು...
" ಅಮ್ಮ, ಹುಡುಗಿ ಏನ್ ಓದ್ಕೊಂಡಿದಾಳೆ?"
"ಡಿಗ್ರಿ ಮಾಡ್ಕಂಡ್ ಅವ್ಳೆ ಮಗಾ..ಈಗ ಇಲ್ಲೇ, ಗುಡ್ದದಾಚೆ ಕೊಪ್ಪದಾಗವ್ಳೆ. ಅವಳ್ ಸ್ವಾದರ್ ಮಾವನ್ ಮನೆಯಾಗೆ. ಪಕ್ಸಕ್ಕೆ ಅಂತ ಬಂದವ್ಳಂತೆ."
"ಹೆಸರು"
"ತರಂಗಿಣಿ ಅಂತೆ. ನಂಗೆ ಒಂದಿಷ್ಟೂ ಹಿಡುಸ್ನಿಲ್ಲ ಆ ಹೆಸರು. ಅದೇನು ಅಂತ ಹೆಸರು ಮಡುಗ್ತಾರೋ ಈಗಿನ್ ಕಾಲ್ದಾಗೆ!"
ಅಮ್ಮ ತುಸು ಹಳೆ ಕಾಲದವಳ  ಹಾಗೆಯೇ. ಅಪ್ಪ ಸ್ವಲ್ಪ ಫಾರ್ವರ್ಡ್. ಅಪ್ಪನೇ ನಮಗೆ ಇಷ್ಟು ಚೆಂದದ ಹೆಸರುಗಳನ್ನಿಟ್ಟಿದ್ದು. ಅಮ್ಮನ ವಿರೋಧದ ನಡುವೆಯೂ!
ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕತೊಡಗಿದೆ. "ಮದುವೆ ನಿಶ್ಚಯವಾದೋನು ಇನ್ನೊಂದು ಹೆಣ್ಣಿನ ಬಗ್ಗೆ ಯೋಚಿಸೋದು ಅಂದ್ರೆ ಏನು?ಅದು ಬುದ್ಧಿಗೆ ತಿಳಿಯುತ್ತೆ. ಮನಸ್ಸಿಗಲ್ಲ ಅನ್ನೋ ಹುಂಬ ಸತ್ಯದ ಮಿಥ್ಯ ಅರಿವು. ಅಷ್ಟಕ್ಕೂ, ಹುಡುಗಿ ಒಪ್ಪಿಗೆಯಾ ಅಂತ ನನ್ನ ಕೇಳಿಯೇ ಇಲ್ವೆ ಇವರು?" ಯಾವತ್ತೂ ಇಲ್ಲದ್ದು, ಒಂಥರಾ ಭಂಡ ಧೈರ್ಯ ಬಂದು ದೊಡ್ಡ ಗಂಡಸಿನ ಹಾಗೆ ಯೋಚಿಸಲು ಶುರು ಮಾಡಿದ್ದೆ.
ದಿನಸಿ ಅಂಗಡಿ ವೆಂಕಟರಮಣ ಶೆಟ್ರ ಮಗ ನನ್ನ ಓರಗೆಯವನು. ಊರಲ್ಲಿ ಅಟ್ ಲೀಸ್ಟ್ ಒಂದು ಬೈಕ್ ಅಂತ ಇದ್ದದ್ದು ಅವನ ಹತ್ರಲೇ. ಅದೂ ಬಜಾಜ್ ಚೇತಕ್. ಒಂದರ್ಧ ಗಂಟೆ ಗಾಡಿ ಬೇಕಿತ್ತು ಅಂತ ಕೇಳಿ ಇಸಕೊಂಡು, ಕೊಪ್ಪಕ್ಕೆ ಹೊರಟೆ. ಮನಸ್ಸಿನಲ್ಲಿ ಏನೇನೋ ಯೋಚನೆಗಳು. ಅವ್ಯಕ್ತ ಭಾವನೆಗಳು. ಯಾವುದೂ ಸ್ಪಷ್ಟವಾಗಿಲ್ಲ. ಗಾಡಿ ಏರಿ ಹೊರಟು ಕೊಪ್ಪ ತಲುಪಿದ್ದೇ ತಿಳಿಯಲಿಲ್ಲ. ಹೋಗಿ ಅಲ್ಲಿ ವಿಚಾರಿಸಿದಾಗ ಮನೆ ತೋರಿಸಿದರು. ಬಾಗಿಲು ಬಡಿದೆ. ಒಬ್ಬ ಆಳೆತ್ತರದ ವ್ಯಕ್ತಿ ಬಾಗಿಲು ತೆಗೆದರು.
"ಯಾರು, ಗೊತ್ತಾಗ್ಲಿಲ್ವಲ್ಲಾ.."
"ನಾ...ನು ಇಲ್ಲೇ ಆಚೆ ಕಡೆ ಮಾರೇನಹಳ್ಳಿ ಚಂದ್ರೇಗೌಡರ ಮಗ."
"ಓಹೋ, ನಮ್ ಭಾವಿ ಅಳೀಮಯ್ಯ. ಬಲ್ಲಿ, ಬಲ್ಲಿ"
ಅವ್ರು ಹುಡುಗಿ ತಂದೆ ಇರ್ಬೇಕು ಅಂದ್ಕೊಂಡೆ. ಅಷ್ಟರಲ್ಲೇ, "ಅವ್ವ ತರಂಗಿಣಿ..ನೋಡು ಬಾ ಯಾರ್ ಬಂದವರೆ ಅಂತವ.." ಅರುಚಿದರು.
ಒಳಗಿನಿಂದ ಲಂಗ ದಾವಣಿ ಧರಿಸಿದ್ದ ಲಕ್ಷಣವಾಗಿ ಕಾಣುತ್ತಿದ್ದ ಆಕೆ ಬಂದಳು. ಮನಸ್ಸು ತಕ್ಷಣ ವಾಹಿನಿಯ ಕಡೆ ಹರಿಯಿತು. ಮಾಡರ್ನ್ ಬಟ್ಟೆ ಧರಿಸಿದ್ದ ಅವಳು, ಲಂಗ ದಾವಣಿ ಧರಿಸಿರುವ ಇವಳು. ತುಲನೆ! ನಾಚಿಕೊಂಡಿದ್ದಳೋ ಇಲ್ಲವೋ ಗೊತ್ತಾಗಲಿಲ್ಲ. ಅವಳ ಕಡೆ ನೋಡಲೇ ಇಲ್ಲ. ಅವರಪ್ಪ, ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದರು.
"ನಾನು ಅರ್ಣವ್."
"ಗೊತ್ತು. ಫೋಟೋ ನೋಡಿದ್ದೀನಿ."
"ಒಹ್! ನಂಗೆ ಗೊತ್ತಿರ್ಲಿಲ್ಲ. ನಿಮ್ಮನ್ನ ನಾನು ಇದೆ ಫಸ್ಟ್ ನೋಡ್ತಿರೋದು. ನಿಮ್ ಹತ್ರ ಸ್ವಲ್ಪ ಮಾತಾಡಬೇಕು"
ಅವಳಿಗೆ ಖುಷಿ ಆಯ್ತು ಅನ್ಸುತ್ತೆ. ಮುಖವನ್ನೊಮ್ಮೆ ನೋಡಿದೆ.
"ಹೇಳಿ"
"ಇಲ್ಲಿ ಬೇಡ, ಬೇರೆ ಎಲ್ಲಾದ್ರೂ ಪ್ರಶಾಂತ ಜಾಗ ಇದ್ರೆ ಹೋಗೋಣ್ವಾ?"
"ಸರಿ ಬನ್ನಿ"
ಅವಳ ಹಿಂದೆ ನಡೆದೇ. ಪಾಪ ಅವಳಿಗೇನು ಗೊತ್ತು, ಶಾಂತವಗಿರೋ "ತರಂಗಿಣಿ"ಗೆ ಕಲ್ಲೆಸೆದು ಅಲ್ಲಿ ಒಂದು ಕೋಲಾಹಲವನ್ನೇ ಉಂಟು ಮಾಡಲಿದೆ ನನ್ನ ಮಾತು ಎಂದು?
ಊರ ಕೆರೆಯ ಮೇಲೆ, ನಿರ್ಜನ ಸ್ಥಳದಲ್ಲಿ ಕುಳಿತೆವು. ನಾನು ನೀರನ್ನೇ ನೋಡುತ್ತಿದ್ದೆ. ಆಕೆ ನನ್ನನ್ನೇ ದಿಟ್ಟಿಸುತ್ತಿದ್ದಳು.
"ನಿಮಗೆ ಈ ಮದ್ವೆ ಒಪ್ಪಿಗೇನಾ?"
ಅನಾಮತ್ತಾಗಿ ಬಂದ ಈ ಪ್ರಶ್ನೆಗೆ ಆಕೆ ನಿರುತ್ತರಳಾದಳು ಅನ್ನಿಸಿತು.
"ಹೌದು. ಅಪ್ಪನಿಗೆ ಇಷ್ಟ ಅಂದ ಮೇಲೆ ನನಗೂ ಕೂಡ. ಮಕ್ಕಳಾಗಿ ತಾಯ್ ತಂದೆಯರ ಆಸೆ ನಡೆಸಿಕೊಡೋದು ನಮ್ ಕರ್ತವ್ಯ ಅಲ್ವ?"
ಇವಳ ಮುಂದೆ ನಾನು ಬಹಳ ಸಣ್ಣವನಾಗಿ ಹೋದೆ ಅನ್ನಿಸ್ತು ಒಂದೇ ಮಾತಿಗೆ.
"ನಿಮಗೆ?"
"ಇಲ್ಲ. ನಂಗೆ ಬೇರೆ ಒಬ್ಬ ಹುಡುಗಿ ಹಿಡ್ಸಿದಾಳೆ"
"    "
"ಏನಾದರೂ ಮಾತಾಡಿ. ಪ್ಲೀಸ್. ನೀವೂ ಡಿಗ್ರಿ ಓದಿದ್ದೀರಿ. ಅರ್ಥ ಮಾಡ್ಕೊತೀರಾ ಅಂದ್ಕೊಂಡಿದೀನಿ."
"ಡಿಗ್ರಿ ಮಾಡಿದ ಕ್ಷಣಕ್ಕೆ ನಮ್ ತನ ನಾವ್ ಬಿಡಬೇಕು ಅಂತಲ್ಲ."
ಕಪಾಳಕ್ಕೆ ತೆಗೆದು ಬೀಸಿದ ಹಂಗಿತ್ತು ಮಾತು. ಮತ್ತೆ ಅಸಹಾಯಕನಾದೆ. ಅದರೂ ಈ ಬಾರಿ ಬಿಡಲಾರೆ ಅಂತ ನಿರ್ಧರಿಸಿಕೊಂಡೆ.
"ಹಾಗಲ್ಲ..."
"ಹಂಗೂ ಅಲ್ಲ, ಹಿಂಗೂ ಅಲ್ಲ. ನೀವು ಯೋಚ್ಸೋ ಹಂಗಂತೂ ಅಲ್ವೇ ಅಲ್ಲ."
ಮತ್ತೆ ಚಡೀ ಏಟು.
"ನಾನು ನನ್ನ ಫ್ರೆಂಡ್ಸ್ ಗೆಲ್ಲಾ ಹೇಳ್ಕೊಂಡ್ ನಿಮ್ ಫೋಟೋ ತೋರ್ಸಿದೀನಿ. ಇದಕ್ಕೇನ್ ಹೇಳ್ತೀರಾ?"
"ಅದು ನನ್ ತಪ್ಪಲ್ಲ."
"ತಪ್ಪು ನಿಮ್ದಲ್ದಿದ್ರೂ ಹಾಳಾಗೋದು ನನ್ ಬಾಳು."
"ಅದಕ್ಕೆ ನಾನ್ ಹೊಣೆ ಅಲ್ಲ. ಮದ್ವೆ ನನ್ ಸ್ವಂತ ವಿಷ್ಯ. ಅದರಲ್ಲಿ ಬೇರೆಯವರು ತಲೆ ಹಾಕೋದು ನಂಗೆ ಇಷ್ಟ ಇಲ್ಲ."
"ನಿಮ್ ಅಪ್ಪಾನೆ ನಿಮಗೆ ಬೇರೆಯವರ?"
"ನೋಡಿ, ನಾನು ವಾಹಿನಿ ಅನ್ನೋ ಹುಡುಗೀನ ಇಷ್ಟ ಪಟ್ಟಿದ್ದೀನಿ. ಪ್ರೀತಿ ತಂತಾನೇ ಬೆಳೀಬೇಕು. ಗೊಬ್ರ ಹಾಕಿ ಬೆಳ್ಸಕ್ಕಾಗಲ್ಲ."
"ನನ್ ಗತಿ?"
"ಅದಕ್ಕೆ ಹೇಳೋಕೆ ಬಂದೆ. ಇನ್ನೂ ನಿಶ್ಚಿತಾರ್ಥನೂ ಅಗಿಲ್ವಲ್ಲ..."
"ನಿರ್ಧಾರ ಆಗಿದ್ಯಲ್ಲ?"
"ಮನಸಲ್ಲಿ ಅಂದ್ಕೊಂಡಿರೋದಕ್ಕೂ ವಾಸ್ತವಕ್ಕೂ ವ್ಯತ್ಯಾಸ ಇದೆ."
"ಹ್ಹ"
"ನೋಡಿ, 'ಅರ್ಣವ'ವನ್ನ ಯಾವತ್ತಿದ್ರೂ 'ವಾಹಿನಿ' ಹರೀತಾ ಹರೀತಾ ಸೇರಬೇಕು. ನಿಂತಲ್ಲೇ ನಿಂತಿರೋ, ತಟಸ್ಥವಾಗಿರೋ 'ತರಂಗಿಣಿ' 'ಅರ್ಣವ'ವನ್ನ ಸೇರೋ ಕನಸು ಕಂಡ್ರೆ ನಿಜವಾಗುತ್ತ?"
"ನಾನು ಕನಸು ಕಂಡಿಲ್ಲ. ನನ್ನಲ್ಲಿ ಆ ಆಸೆ ಹುಟ್ಸಿದಾರೆ."
"ತೆಗೆದ್ ಹಾಕ್ಬಿಡಿ ಆ ಆಸೇನ ಮನಸ್ಸಿಂದ."
"ಎಷ್ಟು ಸುಲಭದ ಮಾತು!"
"ನಾ ಹೇಳೋದ್ ಹೇಳಿದೀನಿ. ಮದ್ವೆ ಆಗಿ ಇಬ್ರೂ ತೊಂದ್ರೆ ಪಡೋ ಬದ್ಲು ಈಗಲೇ ಸರಿ ಮಾಡ್ಕಂಡ್ರೆ ಒಳ್ಳೇದು. ನನ್ ಕೆಲಸ ನಾ ಮಾಡಿದೀನಿ. ನಾ ಬರ್ತೀನಿ."
ಸುಮ್ಮನೆ ಎದ್ದು ಬಂದೆ ಬಿಟ್ಟೆ. ಅವಳ ಪ್ರತಿಕ್ರಿಯೆಯನ್ನು ಕೂಡ ನಿರೀಕ್ಷಿಸಲಿಲ್ಲ. ಏನೋ ದೊಡ್ಡದನ್ನು ಸಾಧಿಸಿದವನ ಹುಮ್ಮಸ್ಸು ನನ್ನಲ್ಲಿ. ವಿಜಯೋತ್ಸಾಹದ ನಗು, ಮುಖದಲ್ಲಿ.
ಮನೆಗೆ ಬಂದೆ. ಅಮ್ಮ ಅಡುಗೆ ಮಾಡುತ್ತಿದ್ದರು. "ಅಮ್ಮ, ಆ ದೇವಸ್ಥಾನದ ಎದುರು ಮನೆಗೆ ಏನು ಅಷ್ಟೊಂದು ಜನ?"
"ಓ, ಪುಟ್ರಾಮಯ್ನೋರ್ ಮನೆಯಾ? ಅವ್ರ ಮೊಮ್ಮಗಳ ಲಗ್ನವಂತೆ. ಇಕಾ, ಈಗ ತಾನೇ ಕಾಲ್ಡು ಕೊಟ್ ಹ್ವಾದ್ರು.."
"ವಾಹಿನಿ ವೆಡ್ಸ್ ಹರೀಶ್"
ಭೂಮಿ ಸೀಳು ಬಿಟ್ಟ ಹಂಗಾಯ್ತು. ನನ್ನ ಅವಿವೇಕತನಕ್ಕೆ ಮೆಟ್ಟು ತಗೊಂಡು ಹೊಡ್ಕೊಬೇಕು ಅನ್ನಿಸ್ತು. ಯಾಕ್ ಹಿಂಗಾಯ್ತು?
ಯಾಕ್ ನಾನ್ ಒಂದ್ ಕ್ಷಣ ನನ್ ಬುದ್ಧಿ ಹೇಳಿದ ಹಂಗೇ ಕೇಳಲಿಲ್ಲ? ನಾನು ಮೊದಲ ಬಾರಿಗೆ ಇಷ್ಟ ಪಟ್ಟದ್ದನ್ನು ಪಡೀಬೇಕು ಅನ್ನೋ ಹಟವೋ ಅಥವಾ ನನ್ನ ಬದುಕಿನಲ್ಲಿ ನಿರ್ಧಾರ ತಗೊಳೋಕೆ ಇವರ್ ಯಾರು ಅನ್ನೋ ಸಿಟ್ಟೋ ನನ್ನ ಕೈಲಿ ಈ ಥರ ಮಾಡಿಸಿತೋ?
ತುಲನೆ! ಈಗ ಮಾಡಬೇಕು. ಅಪ್ಪ ಅಮ್ಮನ ನಿರ್ಧಾರಗಳಿಗೆ ಬೆಲೆ ಕೊಡುವ ಅವಳೆಲ್ಲಿ? ನಾನು, ನನ್ನದು ಅಂತ ಅಲೆಯೋ ನಾನೆಲ್ಲಿ. ಕುಬ್ಜನಾಗಿ ಹೋದೆ. ಎಲ್ಲವೂ ಒಮ್ಮೆಲೇ ಕಣ್ಣ ಮುಂದೆ ಹಾಯ್ದು ಹೋಯ್ತು. "ಈ ಕ್ಷಣ ಹೋಗಿ ತರಂಗಿಣಿಯ ಕಾಲು ಹಿಡಿದು ಕ್ಷಮಿಸು ಅನ್ಬೇಕು."
ನಿರ್ಧರಿಸಿ ಹೊರಟೆ. "ನಾನು.."
"ಥೂ, ನಾನು ನಾನು ಅಂತ ಸತ್ತೆಯಲ್ಲೋ ಬೇವರ್ಸಿಯೇ!" ಅಂತರಾತ್ಮದ ಛೀಮಾರಿ.
ಗಾಡಿ ಕೇಳುವಷ್ಟು ವ್ಯವಧಾನವೂ ಇಲ್ಲದೆ ಓಡಿದೆ. ಮನಸಲ್ಲಿ, ತಲೆಯಲ್ಲಿ ಒಂದೇ ಯೋಚನೆ. 'ನನ್ನ ಈ "ಅಹಂ"ಭಾವವೇ ಹೀಗೆ ಮಾಡಿಸಿತೆ?'
ಕೊಪ್ಪ ತಲುಪಿದೆ. ರಾತ್ರಿ ೯ ದಾಟಿತ್ತು. ಒಂದು ದಿನದಲ್ಲಿ ಏನೆಲ್ಲಾ ಆಯಿತು ಈ ಹಾಳಾದ ಮನಸ್ಸಿಂದ ಅಂತ ಅಂದುಕೊಳ್ಳುತ್ತ ಮೆನೆ ಕಡೆ ನೋಡಿದೆ. ಜಿಟಿ ಜಿಟಿ ಮಳೆ ಶುರುವಾಯ್ತು. ಒದ್ದೆ ಮುದ್ದೆಯಾದೆ. ಮನೆ ಬಳಿ ಹೋದೆ. ಅಂಗಳದಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿದ್ದವು.
"ಓ ಅರ್ಣವ ಬಂದ್ರು"
ಗುಸು ಗುಸು ಕೇಳಿಸಿತು.
"ಅಯ್ಯೋ, ಬಾಪ್ಪಾ.. ನನ್ ಮಗಳ ಈ ಯೋಗಮುದ್ರೆ ನೋಡಕ್ ಬಂದ್ಯಾ?" - ತರಂಗಿಣಿಯ ಅಮ್ಮನ ಅಳು!
ಕಾಲುಗಳು ನಡುಗಲು ಹತ್ತಿದವು.
"ನೀವ್ ಹಂಗ್ ಹೋದ ಮೇಲೆ ಮನೆಗೆ ಬಂದು ಬಟ್ಟೆ ಒಕ್ಕಬತ್ತೀನಿ ಅಂತೇಳಿ ಕೆರೆ ಕಡೀಕೆ ಓದಳು ಕಣಪ್ಪ..ಕಾಲು ಜಾರಿ ಬಿದ್ದೌಳೆ ಅನ್ನುಸ್ತದೆ. ಜೇಡಿ ಮಣ್ಣು..ಸೆಳಕಂದ್ಬುಡ್ತು."
ವಿಕಾರ ರೋದನ.
"ಸೆಳೆದದ್ದು ಜೇಡಿ ಮಣ್ಣಲ್ಲ. ನನ್ನ ಅಹಂಕಾರ ಅವಳನ್ನ ದೂಕಿತು" ಮನಸ್ಸಲ್ಲೇ ಅಂದುಕೊಂಡೆ. ಮಳೆಯಲ್ಲೂ ಮೈ ಬೆವರತೊಡಗಿತು.
"ಪಾಪ. ಮಾತಾಡಬೇಕು ಅಂದಾಗ ಒಂದು ಮಾತು ಕೇಳದೆ ನನ್ ಜೊತೆ ಬಂದಳು. ಅವಳ ಬಗ್ಗೆ ಯೋಚನೆಯೇ ಮಾಡದೇ ನಾನು ಕೇವಲ ನನ್ನ ಬಗ್ಗೆ ಯೋಚನೆ ಮಾಡಿದೆ. ಎಂಥ ಹೀನ ಜನ್ಮ ನನ್ನದು?" ಈ ಬಾರಿ ನಿಜವಾದ ಅವಮಾನ ಆದಂತಾಯಿತು. ಬದುಕುವ ಆಸೆಯನ್ನೇ ಕಿತ್ತುಕೊಳ್ಳುವಂಥ ಅವಮಾನ. ಪ್ರಯೋಜನ ಏನು? ನಾನು "ನನ್ನ ಜೀವನ" ಎಂಬ ಯಜ್ಞ ಕುಂಡಕ್ಕೆ ತರಂಗಿಣಿಯನ್ನು "ಸಮಿತ್ತಾಗಿ" ಬಳಸಿಕೊಂಡಿದ್ದಾಗಿತ್ತು ಅದಾಗಲೇ. ತರಂಗಿಣಿಯ ಶಾಂತ ಮಾನಸ ಸರೋವರದಲ್ಲಿ ಸುಮ್ಮನೆ ಕಲ್ಲೆಸೆದು ಘೋರ ಪ್ರಳಯ ಉಂಟು ಮಾಡಿ..ಅತ್ತ ವಾಹಿನಿಯೂ ಇಲ್ಲ, ಇತ್ತ ತರಂಗಿಣಿಯೂ..ಛೆ!
"ಮನಸ್ಸೇ ಹೀಗಾ?"
ಅಂತರಾತ್ಮದ ವಿಕೃತ ನಗು!
ಮಂದಹಾಸ ಬೀರುತ್ತ ಚಿರ ನಿದ್ರೆಗೆ ಜಾರಿದ್ದ ತರಂಗಿಣಿಯ ಮಂದಹಾಸ ನನ್ನನ್ನು ಇರಿದು ಇರಿದು ಕೊಲ್ಲುತ್ತಿತ್ತು!
ಸುಮ್ಮನೆ ಪಡಸಾಲೆಯ ಕಂಬಕ್ಕೆ ಒರಗಿ ಕುಸಿದೆ..

3 comments:

  1. Nice one, thumba chennagi barediddeera.

    ReplyDelete
  2. Thank you Nisha avare! heege protsaahisuttiri. :)

    ReplyDelete
  3. ಬರೆದ ಶೈಲಿ, ಕಥೆಯ ರಚನೆ ಹಿಡಿಸಿತು... ಕಥೆಯ ಅ೦ತ್ಯ ಬೇಜಾರು ಮಾಡಿತು :(

    ReplyDelete